ಗೋಣಿಕೊಪ್ಪ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದಲ್ಲಿ ಮೇ 28 ರಂದು ನಡೆಯಲಿರುವ ಪ್ರಸಿದ್ಧ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದ 'ಬೇಡು ಹಬ್ಬ'ದ (ಬೋಡ್ನಮ್ಮೆ) ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ಎಚ್ಚರಿಕೆ ನೀಡಿದೆ.
ಈ ವಿಶಿಷ್ಟ ಹಬ್ಬದ ಆಚರಣೆಯ ಭಾಗವಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ವೇಷಧಾರಿ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ತೀರಿಸುವ ಹಳೆಯ ಪದ್ಧತಿ ಜಾರಿಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ವೇಷಧಾರಿಗಳು ಹಬ್ಬದ ಹೆಸರಿನಲ್ಲಿ ಮಿತಿಮೀರಿ ಮದ್ಯ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಇಂತಹ ವ್ಯಕ್ತಿಗಳು ಗೋಣಿಕೊಪ್ಪಲು ಪಟ್ಟಣ ಮತ್ತು ತಿತ್ತಿಮತಿ ನಗರದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಹಣ ನೀಡುವಂತೆ ಸಾರ್ವಜನಿಕರನ್ನು ಹಾಗೂ ವ್ಯಾಪಾರಿಗಳನ್ನು ಪೀಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಅಲ್ಲದೆ, ನಗರಕ್ಕೆ ವ್ಯಾಪಾರ ಹಾಗೂ ವೈಯಕ್ತಿಕ ಕೆಲಸಗಳಿಗಾಗಿ ಬಂದು ಹೋಗುವ ಸಾರ್ವಜನಿಕರನ್ನು ಮತ್ತು ವಾಹನಗಳನ್ನು ಅಡ್ಡಗಟ್ಟಿ ಕಿರಿಕಿರಿ ಉಂಟುಮಾಡಲಾಗುತ್ತಿದೆ. ಪ್ರಮುಖವಾಗಿ, ಅಂಗಡಿಗಳಿಗೆ ಬರುವ ವರ್ತಕರು, ಮಾಲೀಕರು ಮತ್ತು ಮಹಿಳೆಯರೊಂದಿಗೆ ಕೆಲವು ವೇಷಧಾರಿಗಳು ಅತ್ಯಂತ ಅಸಭ್ಯವಾಗಿ ವರ್ತಿಸಿ, ಕೆಟ್ಟ ಪದಗಳಿಂದ ನಿಂದಿಸುತ್ತಾ ತೊಂದರೆ ನೀಡುತ್ತಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಹಬ್ಬದ ಪವಿತ್ರತೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಇಂತಹ ಕೃತ್ಯಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಾನೂನು ಬಾಹಿರವಾಗಿ ವರ್ತಿಸುವ ಹಾಗೂ ಸಾರ್ವಜನಿಕರಿಗೆ ಉಪಟಳ ನೀಡುವ ಯಾವುದೇ ವೇಷಧಾರಿಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಡಗು ಜಿಲ್ಲೆಯ ಪೊಲೀಸ್ ಅಧೀಕ್ಷಕರು (SP) ಬಿಂದುಮಣಿ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.




ಕಾಮೆಂಟ್ಗಳಿಲ್ಲ: