ಬೆಂಗಳೂರು: ತುಮಕೂರು ಜಿಲ್ಲೆಯನ್ನು “ಬೆಂಗಳೂರು ನಾರ್ಥ್” ಎಂದು ಮರುನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಗೃಹ ಸಚಿವ G. Parameshwara ನೀಡಿದ ಹೇಳಿಕೆಗೆ ಬಿಜೆಪಿ ಸಂಸದ P. C. Mohan ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ಕೊಡಗನ್ನು “ಬೆಂಗಳೂರು ಹಿಲ್ ಸ್ಟೇಷನ್” ಎಂದು ಉಲ್ಲೇಖಿಸಿರುವುದು ಗಮನ ಸೆಳೆದಿದೆ.
ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯೆ ನೀಡಿದ ಪಿ.ಸಿ. ಮೋಹನ್, “ಕರ್ನಾಟಕ ಗೃಹ ಸಚಿವರು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ತುಮಕೂರನ್ನು ‘ಬೆಂಗಳೂರು ನಾರ್ಥ್’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ಮಂಗಳೂರು ‘ಬೆಂಗಳೂರು ಬೀಚ್ಫ್ರಂಟ್’, ಕಲಬುರಗಿ ‘ಬೆಂಗಳೂರು ಫಾರ್ ಈಸ್ಟ್’, ಕೊಡಗು ‘ಬೆಂಗಳೂರು ಹಿಲ್ ಸ್ಟೇಷನ್’ ಆಗಿ, ಕೊನೆಗೆ ಇಡೀ ರಾಜ್ಯವೇ ‘ಗ್ರೇಟರ್ ಬೆಂಗಳೂರು ಏರಿಯಾ’ ಆಗಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮೊದಲು ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಮೂರನೇ ವರ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೃಹ ಸಚಿವ ಪರಮೇಶ್ವರ್, “ನಮ್ಮ ಜಿಲ್ಲೆ ಬೆಂಗಳೂರಿಗೆ ಬಹಳ ಸಮೀಪದಲ್ಲಿದೆ. ಕೇವಲ 60 ಕಿ.ಮೀ ದೂರದಲ್ಲಿರುವುದರಿಂದ ತುಮಕೂರನ್ನು ಬೆಂಗಳೂರಿನ ಭಾಗವನ್ನಾಗಿ ಮಾಡಬೇಕು” ಎಂದು ಹೇಳಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ ಕೊಡಗನ್ನು “ಬೆಂಗಳೂರು ಹಿಲ್ ಸ್ಟೇಷನ್” ಎಂದು ಉಲ್ಲೇಖಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಕೊಡಗು ಜಿಲ್ಲೆ ಬೆಂಗಳೂರಿನಿಂದ ಸುಮಾರು 250 ರಿಂದ 270 ಕಿ.ಮೀ ದೂರದಲ್ಲಿದ್ದು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಮಡಿಕೇರಿ, ದುಬಾರೆ ಆನೆ ಶಿಬಿರ, ತಲಕಾವೇರಿ, ಅಬ್ಬಿ ಜಲಪಾತ, ಮಂಡಲ್ಪಟ್ಟಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಕೊಡಗು ಪ್ರಸಿದ್ಧವಾಗಿದೆ. ತಂಪಾದ ಹವಾಮಾನ, ಕಾಫಿ ತೋಟಗಳು, ಹಸಿರು ಪ್ರಕೃತಿ ಹಾಗೂ ಕೊಡವ ಸಂಸ್ಕೃತಿಯ ಕಾರಣದಿಂದ ಕೊಡಗನ್ನು “ಕರ್ನಾಟಕದ ಸ್ಕಾಟ್ಲ್ಯಾಂಡ್” ಎಂದೂ ಕರೆಯಲಾಗುತ್ತದೆ.



.jpg)
ಕಾಮೆಂಟ್ಗಳಿಲ್ಲ: